Pages

... W E L C O M E   T O   P R A S A D ' s   W E B P A G E ...

Thursday, October 23, 2008

ಅಜ್ಜಿ ಮತ್ತು ಮುಗ್ಧ ಮನಸ್ಸು


ಹೇಳ್ತಾರೆ, ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು ಎಂದು. ಅದು ಅಕ್ಷರಸಹ ನಿಜ. ಅವರಾಡುವ ಮಾತುಗಳನ್ನು ಕೇಳುತ್ತ ಇದ್ದರೆ ನೋವೆಲ್ಲ ಮರೆತು ಹೋಗುತ್ತದೆ.ಈಗಂತೂ ಬದಲಾದ ಕಾಲದಲ್ಲಿ ಮಕ್ಕಳ ಮಾತು ಕೇಳಲು ಸಿಗುವುದೇ ಅಪರೂಪ. ಹಿಂದಿನ ಹಳ್ಳಿ ಜೀವನದಲ್ಲಿ ಅಕ್ಕಪಕ್ಕದ ಮನೆ ಮಕ್ಕಳೋ, ಇಲ್ಲ ಸಂಬಂಧಿಕರ ಮಕ್ಕಳೋ ಆಡುವ ಮಾತುಗಳನ್ನು, ಕೀಟಲೆಗಳನ್ನು ನೋಡಿ ಸಂತಸಪಡುತಿದ್ದೆವು. ಈಗ ನಮ್ಮ ಮಕ್ಕಳಾದರೂ ಅವರನ್ನ ಪ್ಲೇ-ಹೋಮ್ ನಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ. ಅವರನ್ನು ನೋಡಿಕೊಳ್ಳುವ ಇಲ್ಲವೇ ಅವರ ಜತೆ ಸ್ವಲ್ಪ ಸಮಯ ಕಳೆಯಲೂ ಸಮಯ ಸಿಗದಷ್ಟು ಜೀವನ ಗೊಂದಲದ ಗೂಡಾಗಿದೆ. ಇದರ ಮದ್ಯೆ ಎಲ್ಲೋ ಮಕ್ಕಳ ಮಾತುಗಳನ್ನು ಕೇಳ ಸಿಕ್ಕಾಗ, ನಾವು ಜೀವನದಲ್ಲಿ ನಿಜವಗಿಯೂ ಏನನ್ನೋ ಕಳೆದುಕೊಳ್ಳುತಿದ್ದೇವೆ ಅನಿಸದೆ ಇರದು.

ಹೀಗೆ ಒಂದು ಅನುಭವವಾಯಿತು ನನಗೆ, ಈ ಮಹಾನಗರಿಯ ಬಸ್ಸಿನ ಪ್ರಯಣದ ವೇಳೆ. ನಾನು ಆಫೀಸಿನಿಂದ ಮನೆಗೆ ಬರ್ತಾ ಇದ್ದೆ. ನನ್ನ ಪಕ್ಕದ ಸೀಟಿನ್ನಲ್ಲಿ ಒಬ್ಬರು ಅರವತ್ತು ಪ್ರಾಯದ ಹುಡುಗಿ, ಆವರ ಪಕ್ಕದಲ್ಲಿ ಒಬ್ಬ ಮುದ್ದು ಹುಡುಗ ಕಿಟಕಿಯಿಂದಾಚೆಗೆ ಇಣುಕಿ ನೋಡುತ್ತಿದ್ದ. ಅವನ ವೇಶಭೂಷಣಗಳಿಂದ ಅವನೊಬ್ಬ ಬಡಕುಟುಂಬಕ್ಕೆ ಸೇರಿದ್ದನೆಂದು ಹೇಳಬಹುದಾಗಿದ್ದರೂ, ಆ ಕಂಗಳಲ್ಲಿ ಇರುವ ಕಾಂತಿ ಎಲ್ಲರ ಮನಗೆಲ್ಲುವಂತಹುದು. ನಮಗೆ ಕಾಣದ್ದು ಅವನಿಗೆ ಏನು ಕಂಡಿತೋ ನಾನರಿಯೆ. ಆದರೆ ಅವನ ಮುಖದಲ್ಲಿನ ಖುಶಿಯಿಂದ ಈ ಕಿಟಕಿ ದೃಶ್ಯಗಳು ಅವನಿಗೆ ಮುದನೀಡಿವೆ ಅನ್ನುವುದು ವ್ಯಕ್ತವಾಗುತ್ತಿತು, ನಾನು ಚಿಕ್ಕವನಿದ್ದಾಗ ತಂಗಿ ಜೊತೆ ಕಿಟಕಿ ಸೀಟಿಗಾಗಿ ಜಗಳ ಆಡಿದ್ದು, ರಿಪ್ಪನ್-ಪೇಟೆಯ ಚಿಕ್ಕಮ್ಮನ ಮನೆಯಿಂದ ಊರಿಗೆ ವಾಪಾಸು ಬರುವಾಗ ದಾರಿಯುದ್ದಕ್ಕೂ ತಂಗಿ ಜೊತೆ ನಾಯಿ ಲೆಕ್ಕ ಮಾಡುತ್ತ ಬಂದಿದ್ದು, ಇದೆಲ್ಲ ನೆನಪಿಗೆ ಬಂದು ಒಮ್ಮೆ ಮತ್ತೆ ಬಾಲ್ಯಕ್ಕೆ ಕರೆದೊಯ್ದ ಈ ಬಸ್ಸಿನ ಪ್ರಯಣಕ್ಕೆ ಕೃತಜ್ನತೆ ಹೇಳಿದೆ.

ಒಂದು ಕಡೆ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಆಯ್ತು, ಆಗ ಮುದುಕಿ ತನ್ನಷ್ಟಕ್ಕೆ ಗೊಣಗಲು ಶುರು ಮಾಡಿತು, “ಬೆಂಗಳೂರೆಲ್ಲ ಹೀಗೆ.. ಬೆಂಗಳೂರೆಲ್ಲ ಹೀಗೆ .. “ ಎಂದು. ಪಕ್ಕದಲ್ಲಿದ್ದ ಆ ಹುಡುಗನಿಗೆ ಅಜ್ಜಿ ಹೀಗೆ ಯಾಕೆ ಹೇಳ್ತಾ ಇದೆ ಅಂತ ತಿಳೀದೇ “ಯಾಕಜ್ಜಿ.. ಯಾಕಜ್ಜಿ..?” ಅಂತ ಕೇಳಿದ್ರೆ ಆ ಅಜ್ಜಿ ಸಿಟ್ಟು ಮನಸ್ಸಲ್ಲೇ ಬೆಂಗಳೂರು ಟ್ರಾಫಿಕಿಗೆಲ್ಲ ಯೆಡಿಯೂರಪ್ಪನೇ ಕಾರಣ ಅನ್ನೋ ತರ, ವೀರೋದ ಪಕ್ಷದ ಖರ್ಗೆ ಸ್ವರ ಮಾಡಿ “ಚೀಫ್ ಮಿನಿಷ್ಟರ್ ಸತ್ತಹೋಗಿದ್ದಾನೆ..” ಅಂದಳು. ಪಾಪ ಈ ಮಗುಗೆ ಅವಳ ಮನಸ್ಸಿನ ಕೋಪ ಹೇಗೆ ಅರ್ಥವಾಗಬೇಕು? ಸತ್ತುಹೋದವರು ಯಾರು, ಬಸ್ಸು ಯಾಕೆ ಮುಂದೆ ಹೊಗ್ತಾ ಇಲ್ಲ, ಇದೇನೂ ತಿಳಿಯದೆ ಅಜ್ಜಿ ಕಡೆ ಮುಖ ಮಾಡಿ “ಯಾರಜ್ಜಿ ಸತ್ತುಹೋಗಿದ್ದು, ಆ ಟಿಕೇಟ್ ಕೊಡ್ತಾ ಇದ್ರಲ್ಲ, ಅವ್ರಾ?” ಅಂತ ಕೇಳಿದಾಗ ನನಗೆ ನಗು ತಡೆಯಲಾಗಲಿಲ್ಲ. ಅಜ್ಜಿಗೂ ಆ ಮಾತು ಕೇಳಿ ಯೆಡಿಯೂರಪ್ಪನ ಮೇಲಿನ ಕೋಪ ಎಲ್ಲ ಮರೆತುಹೋಗಿ ಒಮ್ಮೆ ನಕ್ಕುಬಿಟ್ಟರು. ಜಾಸ್ತಿ ಜನ ಇಲ್ಲದೆ ಇರೋದ್ರಿಂದ ಕಂಡಕ್ಟರ್ ಅಲ್ಲೆ ಹಿಂದಿನ ಸೀಟಲ್ಲಿ ಕುಳಿತಿದ್ದ. ಆದ್ರೆ ಅವ ಇವತ್ತು ಎಷ್ಟು ದುಡ್ಡು ಸರಕಾರಕ್ಕೆ ಮೋಸಮಾಡಿದ್ದಿನಿ ಅನ್ನೊದು ಲೆಕ್ಕ ಸಿಗದೆ, ಇನ್ನು ಒಂದಿಷ್ಟು ಜನರಿಗೆ ಸುಮ್ಮನೆ ಟಿಕೇಟು ಕೊಟ್ಟು ಲಾಭ ಕಮ್ಮಿಯಾಯಿತು ಅನ್ನೊ ಕೊರಗಲ್ಲಿ ಇದ್ದ ಹಾಗೆ ಕಂಡು ಬಂದ. ಅವನು ಈ ಚಿಕ್ಕ ವಿಷಯಗಳಲ್ಲಿ ಖುಷಿ ಪಡುವ ಮನಸ್ಸಿನವನಾಗಿರಲಿಲ್ಲ.

ಅಜ್ಜಿ ಸ್ವಲ್ಪ ನಗುವನ್ನು ಹತ್ತಿಕ್ಕಿ, “ಇಲ್ಲಪ್ಪ, ಅವನಲ್ಲ ಸತ್ತುಹೋಗಿದ್ದು!” ಅಂದ್ರೆ, “ಮತ್ಯಾರು? ಬಸ್ಸು ಒಡ್ಸ್ತಾ ಇದ್ರಲ್ಲ ಅವ್ರಾ?” ಅಂತ ಕೇಳಿದಾಗ ಇನ್ನು ಜಾಸ್ತಿನೇ ನಗು ಬಂತು. ಅಜ್ಜಿ “ಏನೋ ನೀನು? ಮಿನಿಷ್ಟರ್ ಅಂದ್ರೆ ಗೊತ್ತಿಲ್ವ?” ಅಂತ ಕೇಳಿದರೆ, ಸ್ವಲ್ಪ ನಾಚಿಕೆ ಆದವನಂತೆ ಮುಖಮಾಡಿ “ನಂಗೆ ಗೊತ್ತಿಲ್ಲ” ಅಂದ. ಅಜ್ಜಿ ಮಾತು ಬದಲಾಯಿಸಿ “ನಿನ್ನ ಹುಟ್ಟಿದ ಹಬ್ಬ ಅಂತೆ, ಸ್ವೀಟ್ ಎಲ್ಲ ಎಲ್ಲಿ?” ಕೇಳಿದ್ರೆ “ಅದನ್ನೆಲ್ಲ ಆವಾಗ್ಲೆ ಹಂಚಿ ಆಯ್ತು, ಈಗ ಎಲ್ಲ ಖಾಲಿ” ಅಂದ. ಮತ್ತೆ ಅಜ್ಜಿ ಇನ್ನು ಪ್ರಶ್ನೆ ಕೇಳ್ತಾಳೆ ಅಂತ ನಾಚಿಕೆ ಆಗಿ ಮುಂದೆ ಕೂತಿದ್ದ ತನ್ನ ತಾಯಿಯ ಪಕ್ಕ ಹೋಗಿ ಕೂತ. ಇಷ್ಟೋತ್ತಿಗೆ ನನ್ನ ನಿಲ್ದಾಣ ಬಂದಾಗಿತ್ತು. ಒತ್ತಡದ ಬದುಕಿನಲ್ಲಿ ಈ ರೀತಿಯ ಒಂದೊಂದು ಚಿಕ್ಕ ಪ್ರಸಂಗಗಳು ಮನಸ್ಸನ್ನು ನಿಜವಾಗಲು ಹಗುರ ಮಾಡುತ್ತವೆ ಅನಿಸಿತು. ಮತ್ತೆ ಮನೆಗೆ ಬಂದು ಅದೇ ಗುಂಗಲ್ಲಿ ಇನ್ನೊಮ್ಮೆ ಬಾಲ್ಯ ಬಂದರಾಗದೇ ಅನಿಸದೆ ಇರಲಿಲ್ಲ.

5 comments:

Unknown said...

ತುಂಬಾ ಚೆನ್ನಾಗಿದೆ ...

shruthi shetty said...

Nice one...

Pramod P T said...

ನಿಜ ಪ್ರಸಾದ್, ಒತ್ತಡದ ಬದುಕಿನಲ್ಲಿ ಈ ರೀತಿಯ ಒಂದೊಂದು ಚಿಕ್ಕ ಪ್ರಸಂಗಗಳು ಮನಸ್ಸನ್ನು ನಿಜವಾಗಲು ಹಗುರ ಮಾಡುತ್ತವೆ.
ಬರಹ neat ಆಗಿ ಓದಿಸಿಕೊಂದು ಹೋಗುತ್ತ್ವೆ.
ಅಜ್ಜಿ ಸಿಟ್ಟನ್ನ ತೋರ್ಪಡಿಸೊ ರೀತಿ ಹಾಗು ನಿಮ್ಮ ಬಾಲ್ಯದ ಆಲೋಚನಾ ಲಹರಿಯಿಂದ ವಾಸ್ತವಿಕ ಪ್ರಪಂಚಕ್ಕೆ ಮರಳುವದನ್ನ ಇನ್ನೂ ಚೆನ್ನಾಗಿ ವರ್ಣಿಸಬಹುದಿತ್ತು ಅನ್ನಿಸ್ತಿದೆ.

Prasad Shetty said...

@ ಪ್ರಸನ್ನ
ತುಂಬಾ ದನ್ಯವಾದಗಳು.

@ Shruthi
Thanks a Lot

@ ಪ್ರಮೋದ್
ತುಂಬಾ ದನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ.

Pavithra RajeshKumar Shetty said...

so a dina total nav lekka hakid 73 nayi..